ಚಂದನವನದಲ್ಲಿ ಕಿರುತೆರೆ ಕಲಾವಿದರು ಹಿರಿತೆರೆಗೆ ಬರುತ್ತಿರುವುದು ವಾಡಿಕೆಯಾಗಿದೆ. ಅದೇ ರೀತಿ ೧೦೦೦ ಕಂತುಗಳನ್ನು ಪೂರೈಸಿರುವ ಪುಟ್ಟಗೌರಿ ಮದುವೆ ಧಾರವಾಹಿಯಲ್ಲಿ ನಟಿಸಿರುವ ಬೆಂಗಳೂರು ನೀರೆ ರಂಜನಿರಾಘವನ್ ರಾಜಹಂಸ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಮೂರು ವರ್ಷ ಇರುವಾಗಲೆ ವೇದಿಕೆ ಹಂಚಿಕೊಂಡ ಈಕೆಗೆ ಭಯ ಎನ್ನುವುದು ಅಂದಿನಿಂದಲೇ ಮಾಯವಾಗಿದೆ. ಚಿಕ್ಕಂದಿನಿಂದಲೂ ನಟಿಯಾಗುವ ಆಸೆ ಮೊಳಕೆಯಲ್ಲಿ ಚಿಗುರಿದೆ. ಆದರೆ ಸಂಪ್ರದಾಯಸ್ಥ ಕುಟುಂಬವಾಗಿದ್ದರಿಂದ ಅಪ್ಪನಲ್ಲಿ ಹೇಳಿಕೊಳ್ಳಲು ಭಯ. ಮುಂದೆ ಅಮ್ಮನ ಪ್ರೋತ್ಸಾಹದೊಂದಿಗೆ ನಾಗಭರಣರವರು ನಿರ್ದೇಶಿಸುತ್ತಿರುವ ಕೆಳದಿ ಚೆನ್ನಮ್ಮ ಧಾರವಾಹಿಗೆ ಅಡಿಷನ್ನಲ್ಲಿ ಪಾಲ್ಗೋಂಡು ಆಯ್ಕೆಯಾಗಿದ್ದು ಉಂಟು. ಸ್ಪಲ್ಪ ದಿನದಲ್ಲೆ ಚೆನ್ನಮ್ಮ ಪ್ರಾಜೆಕ್ಟ್ ನಿಂತು ಹೋಗಿದ್ದರಿಂದ ಅದೃಷ್ಟ ಕೈಕೊಟ್ಟಿದೆ. ಮುಂದೆ ಆಕಾಶದೀಪ ಧಾರವಾಹಿಯ ನಾಯಕಿ ತಂಗಿ ಪಾತ್ರ ತಕ್ಕಮಟ್ಟಿಗೆ ಹೆಸರು ತಂದು ಕೊಟ್ಟಿತು. ಕೇವಲ ಕ್ಯಾಮಾರ ಮುಂದೆ ಅಭಿನಯಿಸುವುರಿಂದ ತೃಪ್ತಿ ಸಿಗದ ಕಾರಣ, ನಟನೆಯಲ್ಲಿನ ತಾಲೀಮುಗಳನ್ನು ತಿಳಿದುಕೊಳ್ಳುವ ಅದಮ್ಯ ಬಯಕೆಯಿಂದ ರಂಗಭೂಮಿಯಲ್ಲಿ ತರಭೇತಿ ಪಡೆದುಕೊಂಡಿದ್ದಾರೆ ರಂಜನಿ.
ಮೊದಲ ಪ್ರಯತ್ನ ಕೈಕೊಟ್ಟರೂ, ಎರಡನೆ ಹಾದಿ ಇವರಿಗೆ ಹತಾಶೆ ಮಾಡದೆ ಪುಟ್ಟಗೌರಿ ಮದುವೆಯಲ್ಲಿ ನಾಯಕಿಯಾಗಿ ನಟಿಸಿದ್ದ ಸಾನಿಯಾ ಅನಿವಾರ್ಯ ಕಾರಣಗಳಿಂದ ಹೂರಬಂದಾಗ, ಅದೇ ಪಾತ್ರವು ರಂಜಿತಾಗೆ ದಕ್ಕಿದ್ದು, ಅಂದಿನಿಂದ ತಿರುಗಿ ನೋಡದೆ ಸಾವಿರ ಕಂತುಗಳ ಸರದಾರಣಿ ಮಟ್ಟಕ್ಕೆ ಬಂದು ನಿಂತಿದ್ದಾರೆ. ಎಲ್ಲೆ ಹೋದರೂ ಪುಟ್ಟಗೌರಿ ಅಂತ ಮಾತನಾಡಿಸಿದಾಗ ಒಂದು ರೀತಿಯ ಸಾರ್ಥಕ ಸಮಾಧಾನ ಬರುತ್ತದೆ ಎನ್ನುತ್ತಾರೆ. ಸದ್ಯ ಶೇಷಾದ್ರಿಪುರಂ ಕಾಲೇಜಿನಲ್ಲಿ ಎಂಬಿಎ ವ್ಯಾಸಾಂಗ ಮಾಡುತ್ತಿದ್ದು ಸಮಯ ಹೊಂದಿಸಿಕೊಂಡು ಎರಡು ದೋಣಿಯಲ್ಲಿ ಪಯಣಿಸುತ್ತಿದ್ದಾರೆ. ಕಲಾವಿದರು ಎಂದರೆ ಗಂಧರ್ವರು ಎನ್ನುತ್ತಾರೆ ಅಂತ ನಂಬಿರುವ ಇವರು ಸತತ ೩೦ ತಿಂಗಳು ಚಿತ್ರೀಕರಣದಲ್ಲಿ ಭಾಗಿಯಾಗಿದ್ದು ಒಂದು ದಿನವು ಬೇಸರತರಿಸಿಲ್ಲವಂತೆ. ಇವರ ಅಭಿನಯ ನೋಡಿದ ನಿರ್ದೇಶಕ ಜಡೇಶ್ಕುಮಾರ್ ರಾಜಹಂಸ ಚಿತ್ರಕ್ಕೆ ನಾಯಕಿ ಪಾತ್ರಕ್ಕೆ ಆಹ್ವಾನ ನೀಡಿದ್ದಾರೆ. ಮೊದಲ ಭೇಟಿಯನ್ನು ತಿರಸ್ಕರಿಸಿದ್ದು, ನಂತರ ನಿರ್ದೇಶಕರು ಹೇಳಿದ ಕತೆ ಕೇಳಿ ಆಸಕ್ತಿಯಿಂದ ಒಪ್ಪಿಕೊಂಡಿದ್ದಾರೆ. ಮೊದಲನೆಯದಾಗಿ ಕತೆ, ಎರಡನೆಯದು ಪಾತ್ರ. ಯಾವ ಸಿನಿಮಾಕ್ಕೂ ಲಿಂಕ್ ಮಾಡೋಕೆ ಆಗೋಲ್ಲ. ಮರಸುತ್ತವ ಪಾತ್ರ ಆಗಿರದೆ, ಶೇಕಡ ೮೫ರಷ್ಟು ತೆರೆಮೇಲೆ ಇರುತ್ತೇನೆ. ಇದಕ್ಕಾಗಿಯೇ ಸಮ್ಮತಿಸಿದ್ದು ಅಂತ ಕಿರುನಗೆ ಚೆಲ್ಲುತ್ತಾರೆ. ಚಿತ್ರದ ಮೇಲೆ ಅಪಾರ ಭರವಸೆ ಹೊಂದಿದ್ದು, ಪುಟ್ಟಗೌರಿಗೆ ಪೆಟ್ಟು ಬೀಳುತ್ತದೆಂಬ ಕಾರಣದಿಂದ ಇತರೆ ಚಿತ್ರಗಳನ್ನು ಒಪ್ಪಿಕೊಂಡಿಲ್ಲ. ಚಿತ್ರವು ಯಶಸ್ವಿಯಾದಲ್ಲಿ ಮುಂದೆ ಯೋಚನೆ ಮಾಡೋಣ. ಅಲ್ಲಿಯವರೆಗೆ ಇದ್ದೆಇದೆ ಧಾರವಾಹಿ, ಎಂಬ ವಿಶ್ವಾಸದಲ್ಲಿ ಇದ್ದಾರೆ ಪುಟ್ಟಗೌರಿ ಉರಫ್ ರಂಜನಿರಾಘವನ್.